Thursday, February 27, 2020

ಬಿ. ಎಸ್. ವೆಂಕಟಲಕ್ಷ್ಮಿ ಮತ್ತು ಎಚ್. ಎನ್. ಶಾಮರಾಯರ ಸ್ಮರಣಾರ್ಥ ಉಪನ್ಯಾಸ


ಎಚ್. ಎನ್. ಶಾಮರಾಯರು ತಮ್ಮ ಅಗಲಿದ ಪತ್ನಿ (ಲೇಖಕಿ) ಬಿ. ಎಸ್. ವೆಂಕಟಲಕ್ಷ್ಮಿಯವರ ನೆನಪಿನಲ್ಲಿ ಬೆಂಗಳೂರಿನ 'ಸುಚಿತ್ರ ಕಲಾಕೇಂದ್ರ' ದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕೆಂದು ನಿರ್ಧರಿಸಿದ್ದರು. ತಮ್ಮ ಅನಾರೋಗ್ಯದ ನಡುವೆಯೂ  ಆ ಬಗ್ಗೆ ಆಪ್ತರಲ್ಲಿ ಚರ್ಚಿಸಿ ಕಾರ್ಯಪ್ರವೃತ್ತರಾಗಿದ್ದರು. ಮೊದಲ ಕಾರ್ಯಕ್ರಮವನ್ನು ಅವರ  ಮತ್ತು ವೆಂಕಟಲಕ್ಷ್ಮಿಯವರ  ಆಪ್ತರಾದ ನೆಚ್ಚಿನ ಸಾಹಿತಿ ಜಯಂತ್ ಕಾಯ್ಕಿಣಿಯವರಿಂದ  ಆರಂಭಿಸಬೇಕೆಂದುಕೊಂಡಿದ್ದರು. ನಾಲ್ಕೈದು ತಿಂಗಳಿಂದ ಆ ಬಗ್ಗೆ ಪ್ರಯತ್ನಿಸುತ್ತಿದ್ದರೂ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟು ಇತ್ತೀಚಿಗೆ ಫೆಬ್ರವರಿ ೯ರಂದು ನಡೆಯುವುದೆಂದು ತೀರ್ಮಾನವಾಗಿತ್ತು.  ಆದರೆ  ದುರಾದ್ರಷ್ಟವಶಾತ್  ಶಾಮರಾಯರು  ಜನವರಿ ೧೫ರಂದು ನಿಧನರಾದರು.
ಅವರ ಅಭಿಮಾನಿಗಳು  ಶಾಮರಾಯರ ಇಚ್ಚಾನುಸಾರವಾಗಿ ದತ್ತಿ ಉಪನ್ಯಾಸಕಾರ್ಯಕ್ರಮವನ್ನು ಫೆಬ್ರವರಿ ೯ರಂದೇ ನಡೆಸಲು  ತೀರ್ಮಾನಿಸಿ ಕಾರ್ಯಕ್ರಮದ ಹೆಸರಿಗೆ ಶಾಮರಾಯರ ಹೆಸರನ್ನೂ ಸೇರಿಸಿ  ನಡೆಸಲಾಯಿತು. ಉಪನ್ಯಾಸಕ್ಕೆ, ಬಿ. ಎಸ್. ವೆಂಕಟಲಕ್ಷ್ಮಿಯವರು ನಡೆಸಿದ 'ಚರ್ಚೆಗೊಂದು ಚಾವಡಿ' ಪುಟ್ಟಪತ್ರಿಕೆ ಗಮನದಲ್ಲಿಟ್ಟು,   "ಕನ್ನಡ ಸಾಹಿತ್ಯಕ್ಕೆ ಸಣ್ಣ ಪತ್ರಿಕೆಗಳ ಕೊಡುಗೆ" ಎಂಬ ವಿಷಯವನ್ನು  ಆರಿಸಲಾಯಿತು.

ಫೆಬ್ರವರಿ ೯ರಂದು ಸುಮಾರು ೧೧ ಘಂಟೆಗೆ ಸುಚಿತ್ರ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮೊದಲಿಗೆ ಅಗಲಿದ ದಂಪತಿಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ದಂಪತಿಗಳ ನೆರೆಯವನಾಗಿದ್ದ ದಿನೇಶ್ ತಮ್ಮ ಒಡನಾಟದ ಅನುಭವವನ್ನು ಹಂಚಿಕೊಂಡರು.

 ಪ್ರೊ। ಎಚ್. ಎಸ್. ರಾಘವೇಂದ್ರರಾಯರು  ಸಾರ್ಥಕ ಹಾಗೂ ಅರ್ಥಪೂರ್ಣ ಬದುಕನ್ನು ಬದುಕಿದ ಈ ಗಂಡಹೆಂಡಿರನ್ನು  ಸ್ಮರಿಸಿ ಸಂಭ್ರಮಿಸಬೇಕು ನಾವು, ದುಃಖಪಡುವ ಅಗತ್ಯವಿಲ್ಲ ಎಂದರು. 'ಲೈಮ್ ಲೈಟ್ ' ಇಷ್ಟಪಡದ ವೆಂಕಟಲಕ್ಷ್ಮಿಯವರು ಸಮಾಜದಿಂದ ವಿಮುಖರಾದವರಲ್ಲ . ತಮ್ಮ 'ಚರ್ಚೆಗೊಂದು ಚಾವಡಿ' ಪತ್ರಿಕೆಯಲ್ಲಿ  ಗತಕಾಲದ ವಿಶಿಷ್ಟ ವ್ಯಕ್ತಿಚಿತ್ರಗಳನ್ನು ಬೆಳಕಿಗೆ ತರುವ  ಮೂಲಕ, 'ಪತ್ನಿಯರು ಕಂಡಂತೆ ಪ್ರಸಿದ್ಧರು' ಲೇಖನ ಸರಣಿಯಲ್ಲಿ   ಮರೆಯಲ್ಲಿದ್ದ ಮಹಿಳೆಯರ ಬಗ್ಗೆ ಬರೆಯುವ ಮೂಲಕ , 'ಬದುಕು ಬವಣೆ ಭರವಸೆ'   ಪುಸ್ತಕದಲ್ಲಿ ಕೆಲಸಮಾಡುವ  ಹೆಣ್ಮಕ್ಕಳ  ಬದುಕು ಬವಣೆಗಳ ಬಗ್ಗೆ ಬರೆಯುವ ಮೂಲಕ, ತನ್ನ ಚೌಕಟ್ಟಿನೊಳಗೆ ದಿಟ್ಟತನದಿಂದ
ಪ್ರಾಮಾಣಿಕತೆಯಿಂದ ನಮ್ಮ ಸಮುದಾಯದ ಮೇಲಿನ ಕಾಳಜಿಯಿಂದ ವೆಂಕಟಲಕ್ಷ್ಮಿಯವರು ಆದಷ್ಟು ವ್ಯಾಪಕವಾಗಿ ಸಂವಹನ ನಡೆಸಿದವರಾಗಿದ್ದರು. ಬೇಂದ್ರೆಯವರು ಬಣ್ಣಿಸುವ 'ಸಖೀ-ಸಖ' ಭಾವದ ಸೆಲೆ ಈ ದಂಪತಿಗಳಲ್ಲಿ ಹರಿಯುತ್ತಿದ್ದುದನ್ನು ಕಾಣಬಹುದಿತ್ತು. ವೆಂಕಟಲಕ್ಷ್ಮಿಯವರ ಅಗಲಿಕೆಯ ನಂತರವೂ  ಅವರನ್ನು ಮತ್ತೆ  ಮುನ್ನೆಲೆಗೆ ತರುವ ಬಗ್ಗೆ ರಿಯಲ್ ಸ್ಪೋರ್ಟ್ ಆಗಿದ್ದ  ಶಾಮರಾಯರು   ತೋರುತ್ತಿದ್ದ ಕಮಿಟ್ಮೆಂಟ್ ಅಪರೂಪದ್ದಾಗಿದೆ  ಎಂದರು.




ಜಯಂತ್ ಕಾಯ್ಕಿಣಿ  'ಚರ್ಚೆಗೊಂದು ಚಾವಡಿ' ಯನ್ನು ಸ್ಮರಿಸುತ್ತಾ  ಕನ್ನಡದಲ್ಲಿ  ಸಣ್ಣ ಪತ್ರಿಕೆಗಳು  ಬೆಳೆದು ಬಂದ ಹಾದಿಯ ಪರಿಚಯ ಮಾಡಿಕೊಡುತ್ತಾ ಅವುಗಳಿಂದ ಕನ್ನಡ ಸಾಹಿತ್ಯ ಪ್ರಪಂಚ ಶ್ರೀಮಂತಗೊಳಿಸುವತ್ತ ನೀಡಿದ ಕೊಡುಗೆಗಳನ್ನು, ಅವುಗಳಲ್ಲಿ ನಡೆಯುತ್ತಿದ್ದ ಗಂಭೀರ ಚರ್ಚೆಗಳನ್ನು ಉದಾಹರಿಸಿದರು.


ಪದ್ಮನಾಭ ಭಟ್ ಶೇವ್ಕಾರ್ ರವರು ಸಣ್ಣ ಪತ್ರಿಕೆಗಳ ಮಹತ್ವ ಮತ್ತು ಅವುಗಳ ಸವಾಲುಗಳ ಬಗ್ಗೆ ಮಾತನಾಡಿದರು. ವೆಂಕಟಲಕ್ಷ್ಮಿಯವರಲ್ಲಿದ್ದ ಗುಣಗಳಾದ - ನಿಷ್ಠುರತೆ, ಬದ್ಧತೆ, ಚಂದಾ ಇಲ್ಲದಿದ್ದರೂ ಪತ್ರಿಕೆ ನಡೆಸುತ್ತೇನೆ ಇಷ್ಟ ಇರುವತನಕ ಎನ್ನುವ ಎದೆಗಾರಿಕೆ - ಇವೆಲ್ಲ ಸಾಹಿತ್ಯಪತ್ರಿಕೆಗಳಿಗೆ ಇರಬೇಕಾದ ಗುಣಗಳಾಗಿರುತ್ತವೆ ಎಂದರು.



ಎಸ. ದಿವಾಕರ್ ಅವರು ೨೦ನೇ ಶತಮಾನದಲ್ಲಿ ಎಲ್ಲ ಪತ್ರಿಕೆಗಳೂ ಶುರುವಿನಲ್ಲಿ ಸಣ್ಣಪತ್ರಿಕೆಗಳೇ ಆಗಿದ್ದವು. ಗಾಂಧಿ, ಡಿ.ವಿ.ಜಿ. ಯವರಂಥವರು ನಡೆಸಿದ್ದ ಸಣ್ಣಪತ್ರಿಕೆಗಳು ಬೀರಿದ್ದ ಮೌಲ್ಯಯುತ  ಪ್ರಭಾವ ಯಾವ ದೊಡ್ದಪತ್ರಿಕೆಗಳಿಂದಲೂ ಬೀರಲಾಗಿರಲಿಲ್ಲ ಎಂದರು. ಹಾಗಾಗಿ ಇಂದಿಗೂ ಸಣ್ಣಪತ್ರಿಕೆಗಳ ಅಗತ್ಯವಿದೆ ಎಂದರು.

ದೀಪಾಗಣೇಶ್ ರವರು  ಶಾಮರಾಯರ ಒತ್ತಾಸೆಯ ಕಾರ್ಯಕ್ರಮಕ್ಕೆ ಅವರೇ ಇಲ್ಲವಾದುದಕ್ಕೆ ವಿಷಾದ ವ್ಯಕ್ತಪಡಿಸಿ, ಅವರು ನಮ್ಮ ಮನಸ್ಸಿನಲ್ಲಿರುತ್ತಾರೆನ್ನುತ್ತಾ ಭಾಗವಹಿಸಿದವರಿಗೆಲ್ಲ ಧನ್ಯವಾದಗಳನ್ನು ಸಮರ್ಪಿಸಿದರು. ಶಾಮರಾಯರ ತಮ್ಮ Dr. ರಾಜಾರಾಯರು ಅತಿಥಿಗಳಿಗೆ ಹೂವಿನಗಿಡಗಳನ್ನು  ಅರ್ಪಿಸಿ ಅಭಿನಂದಿಸಿದರು.
ಲಘು ಭೋಜನ, ಲಘು ಹರಟೆಗಳೊಂದಿಗೆ, ಎಂಟಿ -ಶ್ಯಾಂ ದಂಪತಿಗಳ ಒಡನಾಟದ  ನೆನಪುಗಳನ್ನು ಮೆಲಕುಹಾಕುತ್ತಾ  ಕಾರ್ಯಕ್ರಮ ಕೊನೆಗೊಂಡಿತು. 
ಕಾರ್ಯಕ್ರಮದ ದೃಶ್ಯಸರಣಿಗಳು ಇಲ್ಲಿವೆ :


No comments:

Post a Comment